Sunday, December 6, 2020

ದೇವರಿಗೆ_ಅರ್ಪಿಸಬೇಕಾದ_ಪುಷ್ಪಗಳು

ದೇವರಿಗೆ_ಅರ್ಪಿಸುವ_ಪುಷ್ಪಗಳು -ಅಗ್ನಿ ಪುರಾಣ 

ಭಗವದ್ಗೀತೆಯಲ್ಲಿ ಪತ್ರಂ, ಪುಷ್ಪಂ, ಫಲಂ, ತೋಯಂ (ಎಲೆ, ಹೂವು, ಹಣ್ಣು, ನೀರು) ಇವುಗಳಲ್ಲಿ 
ಹಾಗಾದರೆ ಭಗವಂತನಿಗೆ ಇಷ್ಟವಾದ ಪುಷ್ಪವಾವುದು? ತಾವರೆ, ನೈದಿಲೆ, ಸೇವಂತಿಗೆ, ಮಲ್ಲಿಗೆ, ಸಂಪಿಗೆ, ಕಣಗಿಲೆ, ಇವೆಲ್ಲಾ ಹೂವುಗಳನ್ನೂ ಸಹ ದೇವರ ಪೂಜೆಗೆ ಬಳಸಬಹುದು ನಿಜ, ಆದರೆ ನಿಜವಾಗಿ ಅರ್ಪಿಸ ಬೇಕಾಗಿರುವುದು ಅವನಿಗೆ ಇಷ್ಟವಾದ ಎಂಟು ಪುಷ್ಪಗಳನ್ನು.

*ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿಂದ್ರಿಯ ನಿಗ್ರಹಾಃ*
*ಸರ್ವಭೂತ ದಯಾಪುಷ್ಪಂ ಕ್ಷಮಾಪುಷ್ಪಂ ವಿಶೇಷತಃ l*
*ಶಾಂತಿಪುಷ್ಪಂ ತಪಃsಪುಷ್ಪಂ ಧ್ಯಾನಪುಷ್ಪಂ ತಥೈವ ಚ*
*ಸತ್ಯಮಷ್ಟವಿಧಂ ಪುಷ್ಪಂ ವಿಷ್ಣೋಃ ಪ್ರೀತಿಕರಂ ಭವೇತ್ ll*

ಭಗವಂತನಿಗೆ ಪ್ರಿಯವಾದ ಪುಷ್ಪಗಳಲ್ಲಿ ಮೊದಲನೆಯದೆ ಅಹಿಂಸೆ.
ಯಾವುದೇ ಜೀವಿಯನ್ನಾಗಲಿ ಯಾವುದೇ ವಿಧವಾಗಿ ಕಷ್ಟಕ್ಕೆ ಗುರಿ ಮಾಡಬಾರದು.
ಒಬ್ಬರ ಮನಸ್ಸನ್ನು ಮಾತುಗಳ ಮೂಲಕವೂ ನೋಯಿಸಬಾರದು.
ಮನಸ್ಸಿನಲ್ಲಿಯೂ ಸಹ ಯಾರಿಗೂ ಕೇಡೆಣಿಸಬಾರದು.

ಎರಡನೆಯ ಪುಷ್ಪ ಇಂದ್ರಿಯನಿಗ್ರಹ.
ಮನಸ್ಸಿನಲ್ಲಿ ಬಯಕೆ ಹುಟ್ಟುವುದೇ ತಡ ನ್ಯಾಯಾನ್ಯಾಯಗಳನ್ನು, ಧರ್ಮಾಧರ್ಮಾಗಳನ್ನು ನೋಡದೆ ಇತರರಿಗೆ ಅದರಿಂದ ಯಾವ ವಿಧವಾದ ಕೆಡುಕಾಗಬಹುದೆನ್ನುವ ವಿವೇಚನೆಯಿಲ್ಲದೆ ತಮ್ಮ ಆಸೆಗಳನ್ನು ಪೂರೈಸಿಕೊಳ್ಳುವುದು;
ಇಂದ್ರಿಯಗಳ ಮೇಲೆ ಯಾವುದೇ ವಿಧವಾದ ಹಿಡಿತವಿಲ್ಲವೆನ್ನುವುದರ ಲಕ್ಷಣಗಳು.
ಇಂದ್ರಿಯ ನಿಗ್ರಹವು ದೇವರಿಗೆ ಇಷ್ಟವಾದ ಮತ್ತೊಂದು ಪುಷ್ಪ.

ಸರ್ವಭೂತ ದಯೆ ಮೂರನೆಯ ಪುಷ್ಪ. ಸಹ ಮಾನವರ ಮೇಲೆ ಅಷ್ಟೇ ಅಲ್ಲ ಸಕಲ ಜೀವರಾಶಿಗಳಲ್ಲಿ – ಪ್ರಾಣಿ, ಪಕ್ಷಿ, ಕ್ರಿಮಿ ಕೀಟಾದಿಗಳು, ಸಸ್ಯಗಳ ಮೇಲೆಯೂ ದಯೆ ತೋರಬೇಕೆನ್ನುವುದು ಸನಾತನ ಭಾರತೀಯ ತತ್ತ್ವ.

ನಾಲ್ಕನೇ ಪುಷ್ಪವೇ ಕ್ಷಮಾಗುಣ. ನಮಗೆ ಅಪಕಾರ ಮಾಡಿದವರಿಗೂ ಸಹ ಉಪಕಾರ ಮಾಡಬೇಕು ಅವರ ಮೇಲೆ ಪ್ರತೀಕಾರ ಸಲ್ಲದು ಎನ್ನುವುದೇ ಕ್ಷಮಾಗುಣ.


ಶಾಂತಿ ಐದನೆಯ ಪುಷ್ಪ. ಮನಸ್ಸು ಉದ್ವೇಗಕ್ಕೆ ಒಳಗಾಗಬಾರದು.
ಸುಖ ಬಂದಾಗ ಹಿಗ್ಗುವುದು, ದುಃಖ ಬಂದಾಗ ಕುಗ್ಗುವುದು, ಹೊಗಳಿದರೆ ಉಬ್ಬಿ ಹೋಗುವುದು, ತೆಗಳಿದರೆ ಕುಗ್ಗಿ ಹೋಗುವುದು ಒಳ್ಳೆಯದಲ್ಲ, ಮನಸ್ಸನ್ನು ಪ್ರಶಾಂತವಾಗಿರಿಸಿಕೊಳ್ಳಬೇಕು.

ಆರನೆಯ ಪುಷ್ಪವೆ ತಪಸ್ಸು. ತಪಸ್ಸೆಂದರೆ ಸುತ್ತಲೂ ಹುತ್ತ ಬೆಳೆಯುವವರೆಗೆ ಒಂಟಿಕಾಲಿನ ಮೇಲೆ ನಿಲ್ಲುವುದೆಂದಲ್ಲ. ಆ ಮಾತಿಗೆ ಅರ್ಥ ಕೆಟ್ಟ ವಿಷಯಗಳನ್ನು ದೂರವಿರಿಸಿ ಒಳ್ಳೆಯ ಕಾರ್ಯಗಳನ್ನು ಸಾಧಿಸುವ ಚಲವನ್ನು ಹೊಂದಿರುವುದು.

ಏಳನೆಯ ಪುಷ್ಪವೆ ಧ್ಯಾನ. ಶಂಖದಿಂದ ಬಿದ್ದರೇನೆ ತೀರ್ಥ ಎನ್ನುವಂತೆ ಆಧುನಿಕ ವೈದ್ಯರೂ ಸಹ ಧ್ಯಾನವು ಮಾನಸಿಕ ಹಾಗು ಶಾರೀರಿಕ ಆರೋಗ್ಯಕ್ಕೆ ಒಳ್ಳೆಯದೆಂದು ಹೇಳುತ್ತಿದ್ದಾರೆ.
ಕಡೆಯದಾಗಿ ಹೇಳಿದ್ದರೂ ಸಹ ಮೊದಲನೆಯ ಸ್ಥಾನದಲ್ಲಿರಬೇಕಾಗಿರುವುದು

ಎಂಟನೆಯ ಪುಷ್ಪವಾದ ಸತ್ಯ.
ಯಾವಾಗಲೂ ಸುಳ್ಳನ್ನು ಆಡದೇ ಇರುವುದು, ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು, ಮೋಸ ಮಾಡದೇ ಇರುವುದು, ಮೊದಲಾದವು ಸತ್ಯಪರಿಪಾಲನೆಯ ಕೆಳಗೆ ಬರುತ್ತವೆ.


ಭಗವಂತನನ್ನು ಸಾಮಾನ್ಯವಾದ ಹೂವುಗಳಿಂದಾಗಲಿ, ಬಂಗಾರದ ಹೂವುಗಳಿಂದಾಗಲಿ ಪೂಜಿಸಬಹುದು ಆದರೆ ಪೂಜಾ ಸಮಯದಲ್ಲಿ ತಪ್ಪದೇಅರ್ಪಿಸಬೇಕಾದದ್ದು ಮೇಲೆ ಹೇಳಿದ ಎಂಟು ಪುಷ್ಟಗಳನ್ನೆ. *ಭಗವಂತನಿಗೆ ಪ್ರಿಯವಾದ ಎಂಟು ಪುಷ್ಪಗಳು – ಅಹಿಂಸೆ, ಇಂದ್ರಿಯನಿಗ್ರಹ, ಭೂತದಯೆ, ಕ್ಷಮೆ, ಶಾಂತಿ, ತಪಸ್ಸು, ಧ್ಯಾನ ಮತ್ತು ಅತ್ಯಂತ ಪ್ರಮುಖವಾಗಿರುವುದು ಸತ್ಯ...ದೇವರ ಪೂಜೆಗೆ ನೈಸರ್ಗಿಕ ಹೂವು ಸಿಗದಿದ್ದರೂ ಪರವಾಗಿಲ್ಲ , ಈ ಹೂವುಗಳು ಅವಶ್ಯಕ ಬೇಕೆಬೇಕು..
🙏🙏🙏🙏🙏
ಕೃಷ್ಣಾರ್ಪಣಾಮಸ್ತು 

No comments: